Tuesday 24 September 2019



ಕೆಸರಲ್ಲೊಂದು ಬಿಂಬ ಮೂಡಿದೆ,
ಮುಗಿದ ಮಳೆಯ ಕುರುಹಂತೆ,

ಇಷ್ಟು ದಿನ ತೆಂಗು ಗರಿಗಳು,
ಗಾಳಿ ಮಾತಿಗೆ ತಲೆದೂಗುತ್ತಿದ್ದವು,
ಆದರೆ ವಾರದಿಂದ ಸುರಿದ ಮಳೆಗೆ
ಬದುಕು ಮೆಲ್ಲಗೆ ಬದಲಾಗಿದೆ,
ಗರಿಗಳೀಗ ನೀರ ಮಾತು ಕೇಳುತ್ತಿವೆ. . .

ನೀರ ತರಂಗಗಳಿಗೆ ಅನಿವಾರ್ಯತೆ,
ಬಿದ್ದ ಹನಿಗಳ ಮಾತಿಗೆ ಮಣಿಯಲೇಬೇಕು,
ಪ್ರತಿಬಿಂಬದ ಬದುಕು ಅಷ್ಟೇ ತಾನೇ?
ನೀರಿಗೆ ಅಂಟಿಕೊಂಡೇ ಬದುಕಬೇಕು. . .

ಬಿಂಬಗಳ ಈ ಕಲ್ಪನಾ ಲೋಕಕ್ಕೆ,
ನೀರೇ ಅನಭಿಷಿಕ್ತ ದೊರೆಯಂತೆ,
ಮೂಡುತಿಹ ದೃಶ್ಯ ಚಿತ್ತಾರಗಳಿಗೆ
ಬೆಳಕೇ ಜೀವಂತ ತೆರೆಯಂತೆ,

ಮೋಡಗಳ ಮರೆಯಿಂದ
ಕಿರಣವೊಂದು ಇಣುಕಿದರೆ ಸಾಕು,
ಕಲ್ಪನಾ ಜಗತ್ತು ಕರಗಿ ಹೋಗಲು,
ಕನಸ ನೌಕೆಯೊಂದು ಕಡಲ ಸೇರಲು!

ಆದರೇನಂತೆ,
ಕೆಸರಲ್ಲೊಂದು ಜೀವ ನುಡಿದಿದೆ,
ನಿಲ್ಲದ ಮಳೆಯ ಸ್ವರದಂತೆ!

                  --------ಆದರ್ಶ